ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಬಂದು ಚಲನಚಿತ್ರ ವೀಕ್ಷಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇಂಥಾ ಸಂದರ್ಭದಲ್ಲಿ ಪ್ರೇಕ್ಷಕರನ್ನು ಥಿಯೇಟರ್ಗಳತ್ತ ಸೆಳೆಯಲು ಮಾಲೀಕರು ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬೇಕಾಗಿದೆ .ಕೆ.ಜಿ. ರಸ್ತೆಯ ಸ್ಟೇಟ್ಸ್, ಅಪ್ಸರಾ, ಅಪರ್ಣ ಚಿತ್ರಮಂದಿರಗಳು ಆ ಪ್ರಯತ್ನದಲ್ಲಿ ಯಶಸ್ವಿಯಾಗಿವೆ.
ಪದ್ಮನಾಭನಗರದ ಗೌಡನಪಾಳ್ಯದಲ್ಲಿರುವ ಶ್ರೀನಿವಾಸ ಚಿತ್ರಮಂದಿರ ಆ ಸಾಲಿಗೆ ಹೊಸ ಸೇರ್ಪಡೆಯಾಗುತ್ತಿದೆ. ಬೆಂಗಳೂರಿನಲ್ಲಿ ಸಾಕಷ್ಟು ಚಿತ್ರಮಂದಿರಗಳ ಮಾಲೀಕರು ವಾಣಿಜ್ಯ ಸಂಕೀರ್ಣಗಳತ್ತ ಆಕರ್ಷಿತರಾಗಿರುವ ಕಾಲದಲ್ಲಿ ತಮ್ಮ ಚಿತ್ರಮಂದಿರಕ್ಕೆ ಆಧುನಿಕ ಟಚ್ ಕೊಟ್ಟು ಮಲ್ಟಿಪ್ಲೆಕ್ ಥಿಯೇಟರ್ಗಳ ರೀತಿಯ ಎಂ.ಆರ್.ಹೆಚ್. ಡಿಜಿಟಲ್ ಸಿಸ್ಟಂ ಅಳವಡಿಸಿ, ಪುನಃ ಪ್ರಾರಂಭಿಸುತ್ತಿರುವ ಅದರ ಮಾಲೀಕರಾದ ಎಂ. ದೇವೇಂದ್ರರೆಡ್ಡಿ ಅವರ ಕಾರ್ಯ ಸ್ತುತ್ಯಾರ್ಹ. ೨೦ ವರ್ಷಗಳ ಹಿಂದೆ ಟೂರಿಂಗ್ ಟಾಕೀಸ್ ಆಗಿ ಪ್ರಾರಂಭವಾದ ಈ ಚಿತ್ರಮಂದಿರದಲ್ಲಿ ಬಾಲ್ಕನಿ ಕ್ಲಾಸ್ ಇದ್ದಿಲ್ಲ, ಈಗ ಅತ್ಯಾಧುನಿಕವಾಗಿ ಸಿದ್ಧಪಡಿಸಲಾದ ವ್ಯವಸ್ಥೆಯೊಂದಿಗೆ ಬಾಲ್ಕನಿ ಸೀಟ್ಗಳನ್ನು ಅಳವಡಿಸಲಾಗಿದೆ.
ಈ ಮೊದಲು ಮಧ್ಯಮ ವರ್ಗದ ಜನರಿಗೆ ಮಾತ್ರ ಮೆಚ್ಚುಗೆಯಾಗಿದ್ದ ಈ ಥಿಯೇಟರ್ ಪಿ.ವಿ.ಆರ್. ವೀಕ್ಷಕರನ್ನು ಸೆಳೆಯುವಷ್ಟು ಸಾಮರ್ಥ್ಯ ಹೊಂದಿದೆ. ಮೊದಲಿನಿಂದಲೂ ಚಿತ್ರರಂಗದಲ್ಲೇ ಸೇವೆ ಸಲ್ಲಿಸುತ್ತಿರುವ ನಮಗೆ ಈ ಬಗ್ಗೆ ತುಂಬಾ ಹೆಮ್ಮೆಯಿದೆ. ಜನರನ್ನು ಮಾತ್ರ ಮೊದಲಿನಂತೆ ಚಿತ್ರಮಂದಿರಗಳತ್ತ ಕರೆತರಲು ನಾವು ಪ್ರಯತ್ನಿಸಿದ್ದೇವೆ. ಇದೇ ೨೨ ರಿಂದ ವಿಷ್ಣುವರ್ಧನ್ರವರ ಸ್ಕೂಲ್ ಮಾಸ್ಟರ್ ಚಿತ್ರದೊಂದಿಗೆ ಪುನರಾರಂಭಿಸುತ್ತಿದ್ದೇವೆ. ದಿನಾಂಕ: ೨೧ ರ ಗುರುವಾರ ಚಿತ್ರಮಂದಿರದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಾರಿಗೆ ಸಚಿವ ಆರ್. ಅಶೋಕ್, ಉದ್ಘಾಟಿಸಲಿದ್ದಾರೆ. ಪಿ.ವಿ.ಆರ್. ನಲ್ಲಿ ೧೫೦ ರೂಗೆ ಸಿಗುವ ಅನುಭವವನ್ನು ನಮ್ಮ ಥಿಯೇಟರ್ನಲ್ಲಿ ೫೦ ರೂ ನಲ್ಲಿ ನೀಡುತ್ತಿದ್ದೇವೆ ಎನ್ನುತ್ತಾರೆ ಮಾಲೀಕರಾದ ಎಂ. ದೇವೇಂದ್ರರೆಡ್ಡಿ. ಕ್ಯೂಬ್ ಡಿಜಿಟಲ್ ಜೊತೆಗೆ ವಿಶಾಲವಾದ ಕಾರ್ಪಾರ್ಕಿಂಗ್, ನಿರ್ಮಲವಾದ ಶೌಚಾಲಯ ವ್ಯವಸ್ಥೆ ಇದ್ದು, ಕುಟುಂಬ ಸಮೇತರಾಗಿ ಬರುವ ಪ್ರೇಕ್ಷಕರಿಗೆ ಸ್ಟಾರ್ ಟ್ರೀಟ್ ಮೆಂಟ್ ದೊರೆಯಲಿದೆ. ಎಲ್ಲರಿಗೂ ಅನುಕೂಲವಾಗುವ ಹಾಗೆ ೩೦,೪೦ ಹಾಗೂ ೫೦ ರೂಗಳ ಪ್ರವೇಶ ದರ ಇದೆ.